ಉರ್ದು ಸಾಹಿತ್ಯ ಪ್ರಪಂಚದಲ್ಲಿ ಕೃಷ್ಣಚಂದರದು ಎದ್ದು ಕಾಣಿಸುವ ಹೆಸರು. ಕಥೆ, ಕಾದಂಬರಿ, ನಾಟಕ, ಪ್ರವಾಸ ಸಾಹಿತ್ಯ, ವಿಡಂಬನೆ, ಹಾಸ್ಯ ಬರಹಗಳ ಮೂಲಕ ಸುಮಾರು ಐವತ್ತು ವರ್ಷಗಳಷ್ಟು ಕಾಲ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅದ್ವಿತೀಯ ಲೇಖಕ. ತಮ್ಮ ಸುತ್ತಲಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಮನುಷ್ಯರನ್ನು ಮನುಷ್ಯರಿಂದ ಬೇರ್ಪಡಿಸುವ ಅಮಾನವೀಯ ಸಂಪ್ರದಾಯಗಳನ್ನು, ಶ್ರೀಮಂತ ವರ್ಗದ ವಿಲಾಸೀ ಜೀವನದ ಪೊಳ್ಳುತನವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ಕಲ್ಪನೆಯ ರಮ್ಯಲೋಕದ ಸೊಗಸನ್ನು ಮತ್ತು ವಾಸ್ತವಿಕ ಲೋಕದ ಕಠೋರತೆಯನ್ನು ಸಮರಸಗೊಳಿಸಿದ ಲೇಖಕ ಕೃಷ್ಣಚಂದರ್. ಕನ್ನಡಕ್ಕೆ ಹಲವಾರು ಉರ್ದು ಮತ್ತು ಹಿಂದಿ ಕಥೆಗಳನ್ನು ಅನುವಾದಿಸಿರುವ ಡಾ|| ಪಂಚಾಕ್ಷರಿ ಹಿರೇಮಠ ಅವರು, ಇಲ್ಲಿ ಕೃಷ್ಣಚಂದರ ಎಂಟು ಸಣ್ಣ ಕಥೆಗಳನ್ನು ಅನುವಾದಿಸಿದ್ದಾರೆ.